ಸೀರಿಯಲ್ಗಳ ಟಿ.ಆರ್.ಪಿ ಹೆಚ್ಚುತ್ತಲೇ ಇದೆ. ಅದರಲ್ಲಿ ಅತ್ತೆ ಸೊಸೆ ಪರಸ್ಪರ ಜುಟ್ಟು ಹಿಡಿದು ಜಗಳವಾಡುತ್ತಲೇ ಇದ್ದಾರೆ. ಮಾತು ಮಾತಿಗೆ ದೇವರ ಕೋಣೆಗೆ ಹೋಗಿ ದೀವಾರ್ ಸಿನೆಮಾದಂತೆ ದೇವರನ್ನು ಬ್ಲಾಕ್ ಮೈಲ್ ಮಾಡಿ ತಮ್ಮ ಕೆಲಸ ಗಿಟ್ಟಿಸುತ್ತಲೇ ಇದ್ದಾರೆ. ದಿನ ದಿನ ಕರ್ವಾಚೌತ್ ಮಾಡಿ ತಮ್ಮ ಗಂಡಂದಿರ ಆಯುಷ್ಯ ಹೆಚ್ಚಿಸುತ್ತಲೇ ಇದ್ದಾರೆ. ನಮ್ಮ ಕಾಲೇಜು ಹುಡುಗ ಹುಡುಗಿಯರು ಈ ಸೀರಿಯಲ್ಗಳನ್ನು ಬೈಯ್ಯುತ್ತಲೇ ಕದ್ದು ಮುಚ್ಚಿ ತಮ್ಮ ಪ್ರೇಮಿಗಳಿಗಾಗಿ ಉಪವಾಸ ಮಾಡುವುದು, ಕರ್ವಾಚೌತ್ (ನಂಬಿದರೆ ನಂಬಿ ಬಿಟ್ಟರೆ ಬಿಡಿ… ಆದರೆ ಇದು ನಿಜ!) ನಡೆಸುತ್ತಿದ್ದಾರೆ! ವರ್ಷ ಉರುಳುತ್ತಾ ಸಾಗಿದೆ, ಸೀರಿಯಲ್ಗಳ ಎಪಿಸೋಡ್ ಸಂಖ್ಯೆ ಉರುಳಿದಂತೆ. ಸಾವಿರ ಎಪಿಸೋಡ್, ಎರಡು ಸಾವಿರ ಎಪಿಸೋಡ್ ಮಾಡಿಕೊಂಡು ಧಾರವಾಹಿಗಳು ಸಾಗಿಯೇ ಇವೆ. ನಾವಿನ್ನೂ ಇದರಿಂದ ಮೇಲೆದ್ದಿಲ್ಲ.
ಅದ್ಯಾವುದೋ ಸೀರಿಯಲ್ನಲ್ಲಿ ಅತಿಭಯಂಕರ ಲಕ್ಷ್ಮಿ ವ್ರತ (😉) ಮಾಡಿ ನಾಯಕ ಬದುಕಿ ಉಳಿದನಂತೆ. ಮಂಗಳೂರಿನಲ್ಲಿರುವ ನಮ್ಮ ಪುಸ್ತಕದ ಅಂಗಡಿಗೆ ಒಬ್ಬರು ಬಂದು ಆ ಪುಸ್ತಕ ಕೇಳಿದರು. ಇಲ್ಲವಲ್ಲಾ ಎಂದು ನಾವು ವಿಶಾದಪಟ್ಟು ಅವರನ್ನು ಹಿಂದೆ ಕಳಿಸಿದೆವು. ಆದರೆ ಮರುದಿನದ ಪಾರ್ಸೆಲ್ಲಿನಲ್ಲಿ ಬೆಂಗಳೂರಿನ ಯಾವುದೋ ಹೆಸರೇ ಕೇಳಿರದ ಪ್ರಕಾಶಕರ ಸೀಲ್ ಹೊತ್ತು ನಮ್ಮ ಹಂಚಿಕೆದಾರರ ಮೂಲಕ ಬಂತೇ ಬಂತು ಭಯಂಕರ ಲಕ್ಷ್ಮಿಯ ಭಯಂಕರ ಪುಸ್ತಕ (!) ನೋಡಿದರೆ ಕೆಟ್ಟ ಭಾಷೆಯಲ್ಲಿ ಏನೋ ಭಯಂಕರ ಮಂತ್ರ! ಈ ಪೂಜೆಯನ್ನು ಮಾಡಿ ಪೂಜೆಯಲ್ಲಿ ಈ ಪುಸ್ತಕದ ಎಂಟು ಪ್ರತಿಯನ್ನು ಬ್ರಾಹ್ಮಣರಿಗೆ ಹಂಚಬೇಕಂತೆ. (ಉಚಿತವಾಗಿ!) ವಾಹ್! ಭಲೇ! ದೇವರು ಪುಸ್ತಕದ ಬ್ರಾಂಡ್ ಅಂಬ್ಯಾಸಿಡರ್ ಆದದ್ದನ್ನೂ ನೋಡಿದ್ದಾಯಿತು!
ಇಂದು ಚೆನ್ನಾದ ವ್ಯವಹಾರ ನಡೆಸುತ್ತಿರುವ ಕನ್ನಡದ ಒಂದು ಪ್ರಮುಖ ಧಾರವಾಹಿ ನಿರ್ದೇಶಕರು ಹೀಗೆ ಹೇಳಿದರು, “ನೋಡಿ ನಾನು ಬರೆದದ್ದು, ಚಿತ್ರೀಕರಿಸಿದ್ದು ನೋಡಲು ಈಗ ನನಗೆ ಸಾಧ್ಯವಿಲ್ಲ. ಅಷ್ಟು ಕೆಟ್ಟದಾಗಿ ಬರುತ್ತಿದೆ ನನ್ನ ಸೀರಿಯಲ್ಲು. ಆದರೆ ಇಷ್ಟೊಂದು ಎಪಿಸೋಡ್ ನಂತರ, ಕಥೆ ಮುಖ್ಯವಾಗುವುದಿಲ್ಲ. ಬರೇ ಧಾರವಾಹಿಯ ಹೆಸರು ನಡೆಯುತ್ತದೆ. ಉಳಿದಂತೆ ನಾವು ಕಥೆ ಹೇಳುತ್ತಿಲ್ಲ. ಕಥೆ ಹೇಳುವ ಸೋಗಿನಲ್ಲಿ ಶಾಂಪು, ಸೋಪು ಮಾರುತ್ತೇವೆ ಅಷ್ಟೇ. ಸೀರಿಯಲ್ಲು ನೋಡುವವರು ಮನೆಯಲ್ಲಿ ಕೊಳ್ಳುವ ನಿರ್ಧಾರವನ್ನು ಮಾಡುವ ಹೆಂಗಸರು. ಹಾಗಾಗಿ ಅವರಿಗೆ ಬೇಕಾದಂಥ (ಅಥವಾ ನಾವು ಹಾಗೆ ತಿಳಿದಂಥಾ) ಕಥೆಗಳನ್ನೇ ಮಾಡಿ ಮಾರುತ್ತೇವೆ. ಅದರ ಜೊತೆಗೆ ಶಾಂಪು, ಸೋಪು ಜಾಹಿರಾತು ತೋರಿಸಿ ಅವರ ವ್ಯವಹಾರ ಮಾಡಿಸಿ, ನಾವು ವ್ಯವಹಾರ ಕುದುರಿಸಿಕೊಳ್ಳುತ್ತೇವೆ ಅಷ್ಟೇ”
ಕನ್ನಡಕ್ಕೆ ಇನ್ನು ಎರಡು ಚ್ಯಾನಲ್ ಬರಲಿವೆಯಂತೆ. ಈಗಲೇ ಇರುವ ಐದು ಚ್ಯಾನಲ್ಲಿಗಾಗಿ ಸುಮಾರು ೬೦ ಧಾರವಾಹಿಗಳು ಪ್ರತಿ ದಿನವೆಂಬಂತೆ ಚಿತ್ರೀಕರಣ ನಡೆಸುತ್ತಲೇ ಇವೆ. ಬೆಂಗಳೂರಿನ ಕೆಲವು ಏರಿಯಾಗಳಿಗೆ ಹೋದರೆ, ಪ್ರತೀ ಗಲ್ಲಿಯಲ್ಲೂ ನಿಮಗೆ ಧಾರವಾಹಿ ಚಿತ್ರೀಕರಣ ತಂಡವನ್ನು ಕಾಣಬಹುದು. ಸಾವಿರಗಟ್ಟಲೆ ಜನ ಹಗಲು ರಾತ್ರಿ ನಿಮಗಾಗಿ, ನಮಗಾಗಿ ಕಥೆಗಳನ್ನು ಕಟ್ಟಿ, ಅದಕ್ಕೆ ಶಾಂಪು, ಸೋಪು ಮಸಾಲೆ ಹಾಕಿ ಮಾರುತ್ತಲೇ ಇದ್ದಾರೆ. ನಾವು, ನೀವು ಕೊಳ್ಳುತ್ತಲೇ ಇದೇವೆ. ಎಂಥಾ ಕಾಲವಯ್ಯ! ಇದು ಎಂಥಾ ಕಾಲವಯ್ಯ! ಆದರೆ ಯಾರನ್ನೇ ಕೇಳಿ, “ಅಯ್ಯೋ ಈಗಿನ ಸೀರಿಯಲ್ಲೋ… ದರಿದ್ರ… ದರಿದ್ರ…” ಎನ್ನುವವರೇ ಎಲ್ಲ. ಹಾಗಾದರೆ ಇದನ್ನು ನೋಡುವವರು ಯಾರು? ಯಾಕೆ? ಆ ಸಂದರ್ಭದಲ್ಲಿ ಅವರು ತಮ್ಮ ತಲೆಯನ್ನು ಎಲ್ಲಿಟ್ಟಿರುತ್ತಾರೆ? ಇದನ್ನು ಸರಿಪಡಿಸುವುದು ಹೇಗೆ?
-ಅಭಯ ಸಿಂಹ